ನವದೆಹಲಿ: ತ್ಯಾಜ್ಯ ವಸ್ತುಗಳಿಂದ ಅತ್ಯುತ್ಕೃಷ್ಟ ಪಾರ್ಕ್‌ ನಿರ್ಮಾಣಗೊಂಡಿರುವ ನವದೆಹಲಿಯಲ್ಲಿ ಶೀಘ್ರವೇ “ಭಾರತ ದರ್ಶನ ಪಾರ್ಕ್‌’ ತಲೆಯೆತ್ತಲಿದೆ. ಅದರಲ್ಲಿ ಮೈಸೂರು ಅರಮನೆ, ಒಡಿಶಾದ ಕೊನಾರ್ಕ್‌ ದೇಗುಲ, ಹೈದರಾಬಾದ್‌ನ ಚಾರ್‌ಮಿನಾರ್‌, ಮುಂಬೈನ ವಿಕ್ಟೋರಿಯಾ ಮೆಮೋರಿಯಲ್‌ ಹಾಲ್‌ ಸೇರಿದಂತೆ ಐತಿಹಾಸಿಕ ಮತ್ತು ಜನಪ್ರಿಯ ತಾಣಗಳ ಪ್ರತಿಕೃತಿ ನಿರ್ಮಾಣವಾಗಲಿದೆ. ವೈವಿಧ್ಯತೆಯಲ್ಲಿ ಏಕತೆ ಎಂಬ ಧ್ಯೇಯ ವಾಕ್ಯದ ಅಡಿ ಹೊಸ ಯೋಜನೆ ಅನುಷ್ಠಾನಗೊಳ್ಳಲಿದೆ. ಈ ಯೋಜನೆಗೆ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್‌ ಪುರಿ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದ್ದಾರೆ. ಒಟ್ಟು 6 ಎಕರೆ ಪ್ರದೇಶದಲ್ಲಿ ಪಾರ್ಕ್‌ ನಿರ್ಮಾಣವಾಗಲಿದೆ. ಬಳಕೆ ಮಾಡಲು ಸಾಧ್ಯವಾಗದ ಲೋಹದ ತುಂಡುಗಳಿಂದ ಪ್ರತಿಕೃತಿ ನಿರ್ಮಿಸಲಾಗುತ್ತದೆ. 18-20 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. “ವೇಸ್ಟ್‌ ಟು ವಂಡರ್‌ ಪಾರ್ಕ್‌’ನಲ್ಲಿ ವಿಶ್ವದ 7 ಅದ್ಭುತಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಹೊಸ ಯೋಜನೆಗಾಗಿ ವಾಹನಗಳ ಬಿಡಿ ಭಾಗಗಳು, ಫ್ಯಾನ್‌, ರಾಡ್‌, ಕಬ್ಬಿಣದ ತಗಡು, ನಟ್‌ ಮತ್ತು ಬೋಲ್ಟ್‌ಗಳನ್ನು ಬಳಸಲಾಗುತ್ತದೆ.