Job Description: ➤ ರಷ್ಯಾ ಮತ್ತು ಉಕ್ರೇನ್ ನಡುವಿನ ಸುದೀರ್ಘ ಯುದ್ಧವು ಈಗ ಕಾನೂನು ಮತ್ತು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಹಂತ ತಲುಪಿದೆ. 2022ರ ಮಿಲಿಟರಿ ಕಾರ್ಯಾಚರಣೆಯ ನಂತರ ಉಕ್ರೇನ್‌ನ ಸರ್ಕಾರಿ ಸ್ವಾಮ್ಯದ ಓಶಚಾಡ್‌ಬ್ಯಾಂಕ್ ತನ್ನ ಪ್ರಮುಖ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿದೆ ಎಂದು ಆರೋಪಿಸಿ ರಷ್ಯಾ ವಿರುದ್ಧ ನೂರಾರು ಮಿಲಿಯನ್ ಡಾಲರ್ ಪರಿಹಾರ ಕೋರಿ ಕೇಸ್ ದಾಖಲಿಸಿದೆ. ಈ ಪ್ರಮುಖ ಅಂತಾರಾಷ್ಟ್ರೀಯ ನ್ಯಾಯಾಂಗ ವ್ಯಾಜ್ಯದಲ್ಲಿ ರಷ್ಯಾ ತನ್ನ ಪರವಾಗಿ ಮಧ್ಯಸ್ಥಿಕೆ ವಹಿಸಲು ಭಾರತದ ಮಾಜಿ ಸಿಜೆಐ ಡಿ. ವೈ. ಚಂದ್ರಚೂಡ್ ಅವರನ್ನು ಆಯ್ಕೆ ಮಾಡಿದೆ.➤ 3-ಸದಸ್ಯರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಮಂಡಳಿ: ಈ ಪ್ರಕರಣದ ವಿಚಾರಣೆ ನಡೆಸಲು ಮೂರು ಸದಸ್ಯರ ಮಧ್ಯಸ್ಥಿಕೆ ಮಂಡಳಿಯನ್ನು (Arbitral Tribunal) ರಚಿಸಲಾಗಿದೆ: ಡಯಾಲಾ ಜಿಮೆನೆಜ್ (Dyalá Jiménez): ಕೋಸ್ಟರಿಕಾದ ಮಾಜಿ ವಾಣಿಜ್ಯ ಸಚಿವೆ ಹಾಗೂ ಪ್ರಸಿದ್ಧ ಮಧ್ಯಸ್ಥಗಾರ್ತಿ. ಇವರನ್ನು ಎರಡೂ ದೇಶಗಳು ಜಂಟಿಯಾಗಿ ಟ್ರಿಬ್ಯೂನಲ್‌ನ ಅಧ್ಯಕ್ಷರನ್ನಾಗಿ (President of Tribunal) ಆಯ್ಕೆ ಮಾಡಿವೆ. ಸ್ಟಾವ್ರೊಸ್ ಬ್ರೆಕೌಲಾಕಿಸ್ (Stavros Brekoulakis): ಸಿಂಗಾಪುರದ ನ್ಯಾಷನಲ್ ಯುನಿವರ್ಸಿಟಿಯ ಪ್ರೊಫೆಸರ್ ಹಾಗೂ ಗ್ರೀಕ್ ಮಧ್ಯಸ್ಥಗಾರ. ಇವರನ್ನು ಉಕ್ರೇನ್‌ನ ಓಶಚಾಡ್‌ಬ್ಯಾಂಕ್ ನೇಮಿಸಿದೆ. ಡಿ. ವೈ. ಚಂದ್ರಚೂಡ್ (D. Y. Chandrachud): ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ. ಇವರನ್ನು ರಷ್ಯಾ ನೇಮಕ ಮಾಡಿದೆ. ➤ ವಿವಾದದ ಮೂಲ ಕಾರಣ: ನಾಲ್ಕು ಪ್ರದೇಶಗಳ ನಷ್ಟ: ಉಕ್ರೇನ್‌ನ ಡೊನೆಟ್ಸ್ಕ್, ಲುಹಾನ್ಸ್ಕ್, ಖೇರ್ಸನ್ ಮತ್ತು ಜಪೋರಿಝಿಯಾ (Donetsk, Luhansk, Kherson, Zaporizhzhia) ಪ್ರದೇಶಗಳಲ್ಲಿ ಇದ್ದ ಓಶಚಾಡ್ ಬ್ಯಾಂಕ್‌ನ ಶಾಖೆಗಳು ಹಾಗೂ ಹೂಡಿಕೆಗಳು ರಷ್ಯಾದ ಸಶಸ್ತ್ರ ಪಡೆಗಳ ವಶವಾದ ಕಾರಣ ಬ್ಯಾಂಕ್ ಭಾರಿ ಆರ್ಥಿಕ ನಷ್ಟ ಅನುಭವಿಸಿದೆ. ಉಲ್ಲಂಘನೆ: 1998 ರಲ್ಲಿ ರಷ್ಯಾ ಮತ್ತು ಉಕ್ರೇನ್ ಸರ್ಕಾರಗಳ ನಡುವೆ ಸಹಿಯಾದ ದ್ವಿಪಕ್ಷೀಯ ಹೂಡಿಕೆ ಉತ್ತೇಜನ ಮತ್ತು ಪರಸ್ಪರ ರಕ್ಷಣೆ ಒಪ್ಪಂದದ (BIT) ನಿಯಮಗಳನ್ನು ರಷ್ಯಾ ಉಲ್ಲಂಘಿಸಿದೆ ಎಂದು ಬ್ಯಾಂಕ್ ಆರೋಪಿಸಿದೆ. ನೋಟಿಸ್: 2025ರ ಜುಲೈನಲ್ಲಿ ಬ್ಯಾಂಕ್ ನೀಡಿದ ನೋಟಿಸ್‌ಗೆ ರಷ್ಯಾ ಸ್ಪಂದಿಸದ ಕಾರಣ 2026ರ ಏಪ್ರಿಲ್‌ನಲ್ಲಿ ಅಧಿಕೃತವಾಗಿ ಈ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ➤ ಎರಡು ದೇಶಗಳು ಅಥವಾ ದೇಶ ಮತ್ತು ವಿದೇಶಿ ಕಂಪನಿಗಳ ನಡುವೆ ವಾಣಿಜ್ಯ/ಹೂಡಿಕೆ ವಿವಾದಗಳು ಉಂಟಾದಾಗ ನ್ಯಾಯಾಲಯದ ಹೊರಗೆ ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ವಿವಾದ ಬಗೆಹರಿಸಿಕೊಳ್ಳುವ ಪ್ರಕ್ರಿಯೆಗೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಎನ್ನಲಾಗುತ್ತದೆ.