Job Description: ➤ ಭಾರತ ಮತ್ತು ಚೀನಾ ದೇಶಗಳ ನಡುವಿನ ಗಡಿ ವಿವಾದವನ್ನು ಶಮನಗೊಳಿಸಲು ಹಾಗೂ ಗಡಿಯಲ್ಲಿ ಶಾಂತಿ ಸ್ಥಾಪಿಸಲು ರಾಜತಾಂತ್ರಿಕ ಮಟ್ಟದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ತಲುಪಲಾಗಿದೆ. ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ನಡುವೆ ನಡೆದ 25ನೇ ಸುತ್ತಿನ ವಿಶೇಷ ಪ್ರತಿನಿಧಿಗಳ (Special Representatives - SR) ಮಟ್ಟದ ಮಾತುಕತೆ ಯಶಸ್ವಿಯಾಗಿ ಪೂರ್ಣಗೊಂಡಿದೆ.➤ ಮುಂದಿನ ತಿಂಗಳು ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಅವರು ಭಾರತಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಈ ಸಭೆಯು ತೀವ್ರ ಕುತೂಹಲ ಕೆರಳಿಸಿತ್ತು. ಈ ಸಭೆಯಲ್ಲಿ ಗಡಿ ನಿರ್ವಹಣೆ ಹಾಗೂ ವಿವಾದ ಪರಿಹಾರಕ್ಕಾಗಿ 8 ನಿರ್ಣಯಗಳ (8-Point Consensus) ಐತಿಹಾಸಿಕ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ.➤ ಸಭೆಯ ಪ್ರಮುಖ 8 ನಿರ್ಣಯಗಳು (8-Point Consensus): 1. ಗಡಿ ಗಡಿರೇಖೆ ನಿರ್ಧಾರ (Boundary Delimitation): 2005ರ 'ರಾಜಕೀಯ ನಿಯತಾಂಕಗಳು ಮತ್ತು ಮಾರ್ಗದರ್ಶಿ ತತ್ವಗಳ' ಒಪ್ಪಂದದ ಆಧಾರದ ಮೇಲೆ, ಗಡಿ ಸಮಸ್ಯೆಯನ್ನು ನ್ಯಾಯಯುತ ಮತ್ತು ಪರಸ್ಪರ ಸಮ್ಮತಿಸುವ ರೀತಿಯಲ್ಲಿ ಬಗೆಹರಿಸಲು 'ಅರ್ಲಿ ಅಂಡ್ ಸಬ್ಸ್ಟ್ಯಾನ್ಷಿಯಲ್ ಹಾರ್ವೆಸ್ಟ್' (Early and Substantial Harvest) ತತ್ವದಡಿ ಗಡಿ ಗುರುತಿಸುವಿಕೆ ಪ್ರಕ್ರಿಯೆಯನ್ನು ವೇಗಗೊಳಿಸಲು ನಿರ್ಧರಿಸಲಾಗಿದೆ. 2. ಸೇನಾ ಸಂಪರ್ಕಕ್ಕೆ ಹೊಸ ವ್ಯವಸ್ಥೆ: ಗಡಿ ಭಾಗದಲ್ಲಿ ಉದ್ವಿಗ್ನತೆ ಶಮನಗೊಳಿಸಲು ಮತ್ತು ಸೇನಾ ಕಮಾಂಡರ್ ಮಟ್ಟದ ಮಾತುಕತೆಗಳಿಗಾಗಿ ಹೆಚ್ಚುವರಿಯಾಗಿ ಎರಡು ಹೊಸ ಮಿಲಿಟರಿ ಸಭೆಯ ಸ್ಥಳಗಳನ್ನು (Meeting Points) ಗುರುತಿಸಲು ಒಪ್ಪಿಕೊಳ್ಳಲಾಗಿದೆ. 3. ಹೊಸ ಮಿಲಿಟರಿ ಹಾಟ್‌ಲೈನ್‌ಗಳು (Hotlines): ಪೂರ್ವ (ಅರುಣಾಚಲ ಪ್ರದೇಶ) ಮತ್ತು ಮಧ್ಯ ವಲಯಗಳಲ್ಲಿ (ಉತ್ತರಾಖಂಡ್ ಮತ್ತು ಹಿಮಾಚಲ ಪ್ರದೇಶ) ಉಭಯ ದೇಶಗಳ ಸೇನಾ ಪಡೆಗಳ ನಡುವೆ ತಕ್ಷಣದ ಸಂಪರ್ಕಕ್ಕಾಗಿ ಎರಡು ಹೊಸ ಮಿಲಿಟರಿ ಹಾಟ್‌ಲೈನ್ ಲಿಂಕ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. 4. ತಕ್ಷಣದ ಸಮಸ್ಯೆಗೆ ಸ್ಪಂದನೆ: ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಯಾವುದೇ ತಪ್ಪು ತಿಳುವಳಿಕೆ ಅಥವಾ ತುರ್ತು ಪರಿಸ್ಥಿತಿ ಎದುರಾದಲ್ಲಿ, ಮಿಲಿಟರಿ ಮತ್ತು ರಾಜತಾಂತ್ರಿಕ (WMCC) ಚಾನೆಲ್‌ಗಳ ಮೂಲಕ ತಕ್ಷಣವೇ ಪರಿಹರಿಸಲು ಒಪ್ಪಿಗೆ ಸೂಚಿಸಲಾಗಿದೆ.5. ನದಿ ನೀರಿನ ದತ್ತಾಂಶ ಮತ್ತು ಸಭೆ: ಗಡಿಯಾಚೆಗಿನ ನದಿಗಳ (ಮುಖ್ಯವಾಗಿ ಬ್ರಹ್ಮಪುತ್ರ) ನಿರ್ವಹಣೆ, ಪ್ರವಾಹ ಮುನ್ನೆಚ್ಚರಿಕೆ ಹಾಗೂ ಜಲವಿಜ್ಞಾನದ (Hydrological Data) ಮಾಹಿತಿ ವಿನಿಮಯಕ್ಕಾಗಿ ಮುಂದಿನ ತಿಂಗಳು (ಸೆಪ್ಟೆಂಬರ್) ತಜ್ಞರ ಮಟ್ಟದ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ.6. ಕೈಲಾಸ ಮಾನಸಸರೋವರ ಯಾತ್ರೆ: ಟಿಬೆಟ್‌ ಸ್ವಾಯತ್ತ ಪ್ರದೇಶದಲ್ಲಿ ನಡೆಯುವ ಭಾರತೀಯರ ಪವಿತ್ರ ಕೈಲಾಸ ಮಾನಸಸರೋವರ ಯಾತ್ರೆಯ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಚೀನಾ ಸಮ್ಮತಿಸಿದ್ದು, ಈ ಕ್ರಮವನ್ನು ಭಾರತ ಪ್ರಶಂಸಿಸಿದೆ.7. ಗಡಿ ವ್ಯಾಪಾರಕ್ಕೆ ಮರುಚಾಲನೆ: ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಮುಚ್ಚಲ್ಪಟ್ಟಿದ್ದ ಮೂರು ಗಡಿ ವ್ಯಾಪಾರ ಕೇಂದ್ರಗಳನ್ನು (Border Trade Markets) ಮರುಆರಂಭಿಸಲು ಹಾಗೂ ಗಡಿ ವ್ಯಾಪಾರವನ್ನು ಉತ್ತೇಜಿಸಲು ಉಭಯ ದೇಶಗಳು ಸಮ್ಮತಿಸಿವೆ.8. 2027ರಲ್ಲಿ 26ನೇ ಸುತ್ತಿನ ಮಾತುಕತೆ: ಉಭಯ ದೇಶಗಳ ಮುಖಂಡರ ಮಾರ್ಗದರ್ಶನದಲ್ಲಿ ಗಡಿಯಲ್ಲಿ ಶಾಂತಿ ಕಾಪಾಡಲು ಬದ್ಧತೆ ವ್ಯಕ್ತಪಡಿಸಲಾಗಿದ್ದು, 26ನೇ ಸುತ್ತಿನ ವಿಶೇಷ ಪ್ರತಿನಿಧಿಗಳ (SR) ಮಾತುಕತೆಯನ್ನು 2027ರಲ್ಲಿ ಭಾರತದಲ್ಲಿ ನಡೆಸಲು ನಿರ್ಧರಿಸಲಾಗಿದೆ. KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ