ರಾಜ್ಯದ ರೈತರ ಆರ್ಥಿಕ ಭವಿಷ್ಯವನ್ನು ಬಲಪಡಿಸುವ ಮತ್ತು ಹಸಿರು ಹೊದಿಕೆಯನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯೊಂದಿಗೆ 'ತೇಗದ ಸಿರಿ' ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ. ನಗರದ ಸುತ್ತೂರು ಶಾಖಾಮಠದಲ್ಲಿ ಆಯೋಜಿಸಲಾಗಿದ್ದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 111ನೇ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ ಅವರು ಈ ವಿಷಯ ತಿಳಿಸಿದರು.
- ವಾರ್ಷಿಕ 1 ಕೋಟಿ ಸಸಿ: 'ತೇಗದ ಸಿರಿ' ಯೋಜನೆಯಡಿಯಲ್ಲಿ ಪ್ರತಿ ವರ್ಷ ರಾಜ್ಯದಲ್ಲಿ 1 ಕೋಟಿ ತೇಗದ ಸಸಿಗಳನ್ನು ನೆಡುವ ಬೃಹತ್ ಲಕ್ಞ್ಯ ಹೊಂದಲಾಗಿದೆ.  
- ರಸ್ತೆ ಬದಿ ಹಾಗೂ ಜಮೀನಿನಲ್ಲಿ ನೆಡುತೋಪು: ರಾಜ್ಯದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ಪಕ್ಕದ ಜಮೀನುಗಳಲ್ಲಿ ಅರಣ್ಯ ಇಲಾಖೆ ಹಾಗೂ ಖಾಸಗಿ ನರ್ಸರಿಗಳ ಸಹಯೋಗದೊಂದಿಗೆ ತೇಗದ ಸಸಿಗಳನ್ನು ನೆಡಲಾಗುವುದು.
- 70:30 ಲಾಭಾಂಶ ಹಂಚಿಕೆ: ರಸ್ತೆ ಬದಿಯಲ್ಲಿ ನೆಡುವ ಈ ಮರಗಳನ್ನು ಪಕ್ಕದ ಜಮೀನಿನ ರೈತರೇ ಪೋಷಣೆ ಮಾಡಬೇಕು. ಮುಂದಿನ 20 ರಿಂದ 25 ವರ್ಷಗಳಲ್ಲಿ ಮರ ಬೆಳೆದು ಮಾರಾಟವಾದಾಗ, ಬರುವ ಆದಾಯದಲ್ಲಿ ಶೇ. 70ರಷ್ಟು ಹಣ ರೈತರಿಗೆ (ಭೂಮಾಲೀಕರಿಗೆ) ಹಾಗೂ ಶೇ. 30ರಷ್ಟು ಸರ್ಕಾರಕ್ಕೆ ಹಂಚಿಕೆಯಾಗಲಿದೆ.  
- ದೀರ್ಘಾವಧಿ ಆರ್ಥಿಕ ಭದ್ರತೆ: ಪ್ರಸ್ತುತ ಮಾರುಕಟ್ಟೆಯಲ್ಲಿ ತೇಗದ ಮರಕ್ಕೆ ಹೆಚ್ಚಿನ ಬೇಡಿಕೆ ಹಾಗೂ ಮೌಲ್ಯವಿದ್ದು (ಚದರ ಅಡಿಗೆ ಉತ್ತಮ ದರ), ಇದು ರೈತರಿಗೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಆರ್ಥಿಕ ಸಂಪತ್ತಾಗಲಿದೆ.   
ಹೂಳು ತೆಗೆಯಲು ಕೇಂದ್ರದಿಂದ ಹೊಸ ನೀತಿ: ಇದೇ ಸಂದರ್ಭದಲ್ಲಿ ಮಾತನಾಡಿದ ಸಿಎಂ, ತುಂಗಭದ್ರಾ, ಕಾವೇರಿ ಹಾಗೂ ಆಲಮಟ್ಟಿ ಅಣೆಕಟ್ಟುಗಳಲ್ಲಿ ಶೇಖರಣೆಯಾಗಿರುವ ಹೂಳನ್ನು ತೆರವುಗೊಳಿಸಲು ಕೇಂದ್ರ ಸರ್ಕಾರ ಹೊಸ ನೀತಿಯನ್ನು ರೂಪಿಸಿಕೊಟ್ಟಿದೆ ಎಂದರು. ತುಂಗಭದ್ರಾ ವಿಚಾರವಾಗಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳು ಕೇಂದ್ರ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಅಂತರರಾಜ್ಯ ನೀರಾವರಿ ಸಮಸ್ಯೆಗೆ ಒಮ್ಮತದ ಪರಿಹಾರ ಕಂಡುಕೊಂಡಿರುವುದು ಐತಿಹಾಸಿಕ ಬೆಳವಣಿಗೆ ಎಂದು ಬಣ್ಣಿಸಿದರು.