Job Description: ➤ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯವು 2026ರ ಆಗಸ್ಟ್ 6 ರಂದು ನವದೆಹಲಿಯಲ್ಲಿ ರಾಷ್ಟ್ರವ್ಯಾಪಿ 'ಹರ್ ಘರ್ ತಿರಂಗಾ 2026' ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದೆ. ಈ ಅಭಿಯಾನವು ದೇಶಾದ್ಯಂತ ಆಗಸ್ಟ್ 9 ರಿಂದ 17, 2026 ರವರೆಗೆ ದೇಶಪ್ರೇಮ ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಸಾರುವ ಉದ್ದೇಶದಿಂದ ನಡೆಯಲಿದೆ. 2022ರಲ್ಲಿ ಪ್ರಾರಂಭಗೊಂಡ ಈ ಅಭಿಯಾನವು ಇದೀಗ 5ನೇ ವರ್ಷಕ್ಕೆ ಕಾಲಿಟ್ಟಿದ್ದು, ದೇಶದ ಅತಿ ದೊಡ್ಡ ಜನಪರ ಚಳವಳಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ➤ ಈ ಬಾರಿಯ ಅಭಿಯಾನದ ಪ್ರಮುಖ ಆಕರ್ಷಣೆಗಳು ಹಾಗೂ ಮುಖ್ಯಾಂಶಗಳು:1. 'ವಂದೇ ಮಾತರಂ' 150ನೇ ವರ್ಷಾಚರಣೆಗೆ ಸಮರ್ಪಣೆ ಈ ಬಾರಿಯ ಅಭಿಯಾನವನ್ನು ಭಾರತದ ರಾಷ್ಟ್ರೀಯ ಗೀತೆಯಾದ 'ವಂದೇ ಮಾತರಂ'ನ 150ನೇ ವರ್ಷಾಚರಣೆಗೆ ವಿಶೇಷವಾಗಿ ಸಮರ್ಪಿಸಲಾಗಿದೆ. ಅಭಿಯಾನದ ಭಾಗವಾಗಿ ದೇಶಾದ್ಯಂತ ಸಮೂಹ 'ವಂದೇ ಮಾತರಂ' ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಂಸ್ಕೃತಿ ಸಚಿವಾಲಯವು ವಂದೇ ಮಾತರಂ ಗೀತೆಯನ್ನು ಸರಿಯಾದ ರಾಗ ಮತ್ತು ತಾಳದಲ್ಲಿ ಹಾಡಲು ಕಲಿಯಲು ಹರ್ ಘರ್ ತಿರಂಗಾ ಪೋರ್ಟಲ್‌ನಲ್ಲಿ 5-ಹಂತಗಳ ಆನ್‌ಲೈನ್ ಟ್ಯುಟೋರಿಯಲ್ ಅನ್ನು ಬಿಡುಗಡೆ ಮಾಡಿದೆ. 2. 'ಸೂರ್ಯಪಥ್ ತಿರಂಗಾ' (SURYAPATH TIRANGA) - ಜಾಗತಿಕ ಉಪಕ್ರಮ: 2026ರ ಅಭಿಯಾನದ ಅತ್ಯಂತ ಪ್ರಮುಖ ಜಾಗತಿಕ ಆಕರ್ಷಣೆಯೆಂದರೆ 'ಸೂರ್ಯಪಥ್ ತಿರಂಗಾ'. ಇದು ಉದಯಿಸುವ ಸೂರ್ಯನ ಹಾದಿಯನ್ನು ಅನುಸರಿಸುವ ಒಂದು ಸಾಂಕೇತಿಕ ಜಾಗತಿಕ ತಿರಂಗಾ ರಿಲೇ (Global Tiranga Relay) ಆಗಿದೆ. ಜಗತ್ತಿನ ಪೂರ್ವ ತುದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ (Indian Mission) ಪ್ರಾರಂಭವಾಗಿ, ಸೂರ್ಯನ ಬೆಳಕು ಸಾಗುವಂತೆ ಪೂರ್ವದಿಂದ ಪಶ್ಚಿಮಕ್ಕೆ ಜಗತ್ತಿನಾದ್ಯಂತ 54ಕ್ಕೂ ಹೆಚ್ಚು ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅನುಕ್ರಮವಾಗಿ ಹಾರಿಸಲಾಗುತ್ತದೆ. 3. ಡಿಜಿಟಲ್ ನಿರೂಪಣೆ ಮತ್ತು 'ಸೆಲ್ಫಿ ವಿತ್ ತಿರಂಗಾ: ಸಾರ್ವಜನಿಕರು ರಾಷ್ಟ್ರಧ್ವಜದೊಂದಿಗೆ ಸೆಲ್ಫಿ ತೆಗೆದುಕೊಂಡು ಹರ್ ಘರ್ ತಿರಂಗಾ ಅಧಿಕೃತ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಈ ಬಾರಿಯ ಸೆಲ್ಫಿ ವೈಶಿಷ್ಟ್ಯದಲ್ಲಿ 'ವಂದೇ ಮಾತರಂ' ಸಾಲುಗಳು ಮತ್ತು ರಾಗವನ್ನು ಸಂಯೋಜಿಸಲಾಗಿದೆ.4. ವಿಭಜನೆಯ ಭೀಕರತೆಯ ಸ್ಮರಣೆ ದಿನ (Partition Horrors Remembrance Day): ದೇಶದ ವಿಭಜನೆಯ ಸಮಯದಲ್ಲಿ ಅನುಭವಿಸಿದ ನೋವು ಮತ್ತು ಸವಾಲುಗಳನ್ನು ಸ್ಮರಿಸಲು ಆಗಸ್ಟ್ 14 ರಂದು ದೇಶಾದ್ಯಂತ 'ವಿಭಜನೆಯ ಭೀಕರತೆಯ ಸ್ಮರಣೆ ದಿನ'ವನ್ನು ಆಚರಿಸಲಾಗುತ್ತದೆ. ನವದೆಹಲಿ, ಕೋಲ್ಕತ್ತಾ ಮತ್ತು ಅಮೃತಸರಗಳಲ್ಲಿ ಮುಖ್ಯ ಕಾರ್ಯಕ್ರಮಗಳು, ಮೌನ ಮೆರವಣಿಗೆಗಳು ಹಾಗೂ ಪ್ರದರ್ಶನಗಳು ನಡೆಯಲಿವೆ.